ಬಂಧು ಲತಾ ಅಕ್ಕ ಶ್ರೀ ಪ್ರಸನ್ನ ವೀರಾಂಜನೆಯ ಯೋಗಕೆಂದ್ರದಲ್ಲಿ ನಡೆದ (26 Feb 2025) ೭೬ನೇ ಗಣರಾಜ್ಯೋತ್ಸವಕ್ಕೂ, ಧ್ವಜಸ್ತಂಭದ ಬುಡದಲ್ಲಿ ಅವರು ಸೃಜಿಸಿದ ಸೊಗಸಾದ ತ್ರಿವರ್ಣ ಮೆರೆದವರೆಲ್ಲರ ಗಮನ ಸೆಳೆಯುತ್ತಿತ್ತು. ಆ ದಿನದ ಪ್ರಾರ್ಥನೆ 'ಧವಳಹಿಮದ ಗಿರಿಗಳಲ್ಲಿ' ದೇಶಭಕ್ತಿಗೀತೆ ಹಾಗೂ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ಯೋಗ ಕೇಂದ್ರಕ್ಕಾಗಿ, ಈ ಯೋಗ ಕೇಂದ್ರದ ವೈಶಿಷ್ಟ್ಯವನ್ನು ವರ್ಣಿಸುವ, ನಾಗೇಶ್ ರವರ ಮಿತ್ರ ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಸೂರ್ಯನಾರಾಯಣರವರು ರಚಿಸಿದ ಗೀತೆಯನ್ನು ಸಹಾ ಲತಾ ಅವರು ಮಾಧುರ್ಯವಾಗಿ ಹಾಡಿದರು. ಪ್ರಾರ್ಥನೆಯ ನಂತರ, ಬರಹಗಾರ, ಶಿಕ್ಷಣತಜ್ಞ ಹಾಗೂ ಮುಖ್ಯ ಅತಿಥಿಗಳಾದ ಸೂರ್ಯನಾರಾಯಣರ ಅವರು, ಯೋಗ ಬಂಧುಗಳು, ಹಾಗೂ ನೆರೆದಿದ್ದ ಪುಟ್ಟ ಪುಟ್ಟ ಮಕ್ಕಳು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ಮಕ್ಕಳು ಈ ಸಂದರ್ಭಕ್ಕಾಗೇ ತಾವೇ ಕೈಯಾರ ರಚಿಸಿದ್ದ ಸೊಗಸಾದ ವರ್ಣರಂಜಿತ ಹಿನ್ನೆಲೆಯಲ್ಲಿ ಮೂಡಿಸಿದ ತ್ರಿವರ್ಣ, ವಿವಿಧ ಯೋಗ ಭಂಗಿಗಳಲ್ಲಿ ನಿರತರಾದವರ ವರ್ಣ ಚಿತ್ರ ಇತ್ಯಾದಿಯನ್ನು ಖುಷಿಯಿಂದ ನೆರೆದವರಿಗೆಲ್ಲಾ ತೋರಿಸಿದರು; ಕೆಲ ಮಕ್ಕಳು ಗಣರಾಜ್ಯೋತ್ಸವದ ಹಿನ್ನೆಲೆ, ಪ್ರಾಮುಖ್ಯತೆಯನ್ನು ವಿವರಿಸಿ ಮಾತನಾಡಿದರೆ ಒಂದೆರಡು ಮಕ್ಕಳು ದೇಶಭಕ್ತಿ ಗೀತೆಗಳನ್ನು ಅವರದೇ ಆದ ತೊದಲುಕಂಠದಲ್ಲಿ ಹಾಡಿದರು. ಪುಟಾಣಿ ಹಿತಶ್ರೀ ಹಾಡಲು ಅಕ್ಕ ಚಂದನಳೊಡನೆ ವೇದಿಕೆ ಏರಿದಾಗ, ಅಕ್ಕಳೂ ಮಂಡಿಯೂರಿ ತಂಗಿಯ ಸಮಕ್ಕೇ ಇಳಿದು ಪ್ರೀತಿಯಿಂದ ತಂಗಿಗೆ ಸಾಥ್ ನೀಡಿದ್ದು ನೋಡಲು ಮನೋಹರವಾಗಿತ್ತು. ಶ್ರೀಮತಿ ಪವಿತ್ರರವರು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರರ ಹುಟ್ಟು, ಓದು, ಆಸಕ್ತಿ ವಿಚಾರವಾಗಿ ಪರಿಚಯಾತ್ಮಕವಾಗಿ ಮಾತನಾಡಿದರು. ಶ್ರೀ ಶಾಂತಕುಮಾರ ಅವರು ಗಣರಾಜ್ಯೋತ್ಸವದ ಸಂದರ್ಭ, ಔಚಿತ್ಯತೆ ಇತ್ಯಾದಿ ಕುರಿತು ಸಂದರ್ಭೋಚಿತವಾಗಿ ಮಾತನಾಡಿದರು. ಇಂದಿನ ಸಮಾರಂಭದ ಮುಖ್ಯ ಅತಿಥಿಗಳು ಸಭೆಯನ್ನುದ್ದೇಶಿಸಿ ಮಾತನ್ನಾಡುತ್ತಾ, ನಮ್ಮ ದೇಶದ ಸಂವಿಧಾನವನ್ನು ರಚಿಸುವ ಸಂದರ್ಭದಲ್ಲಿ ಹೇಗೆ ವಿಶ್ವದ ಬೇರೆ ಬೇರೆ ಪ್ರಜಾಪ್ರಭುತ್ವಗಳ ಸಂವಿಧಾನಗಳನ್ನು ಕೂಲಂಕಷವಾಗಿ ಅಭ್ಯಸಿಸಿ, ಅವೆಲ್ಲವುಗಳಲ್ಲಿರುವ ಒಳ್ಳೆಯ ಸಾರವನ್ನು ಸಂಗ್ರಹಿಸಲಾಗಿದೆ ಎಂಬ ವಿಚಾರವನ್ನು ಪ್ರಸ್ತಾಪಿಸಿ, ಹಾಗೆಂದೇ ಮೂಲ ರೂಪದಲ್ಲಿ ನಮ್ಮ ಸಂವಿಧಾನ ಇಡೀ ವಿಶ್ವದಲ್ಲಿಯೇ ಅತ್ಯುತ್ಕೃಷ್ಟ ಸಂವಿಧಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು ಎಂದು ವಿವರಿಸಿದರು. ನಂತರ, ಯೋಗ ಗುರು ನಾಗೇಶ್ ಅವರ ಪ್ರೀತಿಯ ಕೋರಿಕೆಯ ಮೇರೆಗೆ ಯೋಗ ಕೇಂದ್ರಕ್ಕೆ ಬಂದಿದ್ದ, ಗಿರಿಧರ ರಾಮನಾರಾಯಣ ಸಂಸ್ಥೆಯ ಉಪನ್ಯಾಸಕಿ ಭರತನಾಟ್ಯ ನೃತ್ಯಪಟು ಕುಮಾರಿ ಸುಚಿತ್ರಾ ಅವರು ಎರಡು ಹಾಡುಗಳಿಗೆ ಅತ್ಯಂತ ಸೊಗಸಾಗಿ ನರ್ತಿಸಿ ನೆರೆದವರೆಲ್ಲರ ಮೆಚ್ಚುಗೆಯ ಕರರತಾಡನವನ್ನು ಪಡೆದರು. ಶ್ರೀ ಪ್ರಸನ್ನ ರವರ ಸೊಗಸಾದ ನಿರೂಪಣೆಯಿತ್ತು. ಸಮಾರಂಭ ಸಿಹಿತಿಂಡಿ, ಬಿಸ್ಕತ್ತು, ಬಾದಾಮಿ ಹಾಲಿನ ಸವಿಯೊಂದಿಗೆ ಸಂಪನ್ನವಾಯಿತು.